
ತುಮಕೂರು: ಜೂನ್ 27, 2022ರಿಂದ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ಪ್ರಾರಂಭವಾಗಲಿದ್ದು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿಯಮಗಳನ್ವಯ ಕಟ್ಟುನಿಟ್ಟಾಗಿ ಪರೀಕ್ಷೆ ನಿರ್ವಹಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಸೂಚಿಸಿದರು.
ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷಾ ಪೂರ್ವಸಿದ್ಧತೆ ಕುರಿತು ಬುಧವಾರ ಸಂಜೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ, ಎರಡೂ ಶೈಕ್ಷಣಿಕ ಜಿಲ್ಲೆಗಳ ಒಟ್ಟು 13 ಕೇಂದ್ರಗಳಲ್ಲಿ 2084 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, ಕೇಂದ್ರದ ಸುತ್ತಮುತ್ತ ನಿರ್ಬಂಧಕಾಜ್ಞೆ ಜಾರಿ ಮಾಡಿರುವುದರಿಂದ ಪರೀಕ್ಷಾ ಸಿಬ್ಬಂದಿ ಹೊರತಾಗಿ ಯಾರೂ ಪರೀಕ್ಷಾ ಕೇಂದ್ರದ ಆವರಣದಲ್ಲಿ ಪ್ರವೇಶಿಸಬಾರದು. ತಪ್ಪಿದಲ್ಲಿ ಆ ಪರೀಕ್ಷಾ ಕೇಂದ್ರದ ಮುಖ್ಯಸ್ಥರನ್ನು ಜವಾಬ್ದಾರಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ಕೋವಿಡ್-19ರ ಎಸ್ಓಪಿ ಅನುಪಾಲಿಸುವುದು, ಪ್ರಶ್ನೆಪತ್ರಿಕೆ ಸಾಗಾಣಿಕೆ ಮತ್ತು ಉತ್ತರ ಪತ್ರಿಕೆ ಭದ್ರತೆಗೆ ಆರಕ್ಷಕ ಸಿಬ್ಬಂದಿ ನೇಮಕ ಮಾಡಲು ಆರಕ್ಷಕರ ಇಲಾಖೆಗೆ ಸೂಚಿಸಿದರು.
ಉತ್ತರ ಪತ್ರಿಕೆ ದಾಸ್ತಾನುಗೊಳಿಸಲು ಭದ್ರತಾ ಕೊಠಡಿ ಸಿದ್ಧಪಡಿಸಲು ಹಾಗೂ ಭದ್ರತೆ ವ್ಯವಸ್ಥೆಗೊಳಿಸಲು ಉಪನಿರ್ದೇಶಕರುಗಳಿಗೆ ಸೂಚಿಸಿದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ನಿಯಮಗಳ ಚೌಕಟ್ಟಿನಲ್ಲಿ ಪರೀಕ್ಷೆ ನಿರ್ವಹಿಸಲು ಪರೀಕ್ಷಾ ಕಾರ್ಯ ನಿರ್ವಹಿಸುವ ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ತುಮಕೂರು ಶೈಕ್ಷಣಿಕ ಜಿಲ್ಲೆ ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಖಜಾನೆ ಇಲಾಖೆ, ಎಲ್ಲಾ ತಾಲ್ಲೂಕುಗಳ ದಂಡಾಧಿಕಾರಿಗಳು, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಆರಕ್ಷಕ ಇಲಾಖೆ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ಪ್ರಶ್ನೆಪತ್ರಿಕೆ ಪಾಲಕರೊಂದಿಗೆ ಸಭೆ ನಡೆಸಲಾಯಿತು.

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು